ಬೆಚ್ಚನೆಯಾ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯನರಿವ ಸತಿ ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.
ಎಲುಕೊರಳು ನರತೊಗಲು ಬಿಲರಂಧ್ರ ಮಾಂಸದೊಳು
ಹಲತೆರದ ಮಲವು ಸುರಿದಿರಲು ಕುಲಕ್ಕಿನ್ನು
ಬಲವುಂಟೇ ಹೇಳು ಸರ್ವಜ್ಞ
ಹಸಿವು ತೃಷೆ ನಿದ್ರೆಗಳು ವಿಷಮ ಮೈಥುನ ಬಯಕೆ
ಪಶುಪಕ್ಷಿ ನರಗೆ ಸಮನಿರಲು ಕುಲವೆಂಬ
ಘರ್ಷಣೆ ಎತ್ತಣದು ಸರ್ವಜ್ಞ
ನಡೆವುದೊಂದೆ ಭೂಮಿ ಕುಡಿಯುವುದೊಂದೇ ನೀರು
ಸುಡುವಗ್ನಿಯೊಂದೆ ಇರುತಿರಲು
ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ
ಯಾತರ ಹೂವದು ನಾತರದೆ ಸಾಲದೇ
ಜಾತಿ-ಜಾತಿಯೆನಬೇಡ ಶಿವನೊಲಿ
ದಾತನೆ ಜಾತ ಸರ್ವಜ್ಞ
ಸತ್ತದನ ತಿಂಬಾತ ಎತ್ತಣದ ಹೊಲೆಯನು
ಒತ್ತೊತ್ತಿ ಜೀವಿಯ ಕೊರಳಿರಿದು ತಿಂಬಾತ
ಉತ್ತಮ ಹೊಲೆಯ ಸರ್ವಜ್ಞ
ಏನಾದೊಡೇನಯ್ಯ ತಾನಾಗದನಕ
ತಾನಾಗಿ ತನ್ನನಾದೊಡೆ ಲೋಕ ತಾ
ನೇನಾದೊಡೆನು ಸರ್ವಜ್ಞ
ತಾನೊಂದನೆಯ್ದಿದೆನು ಏನೊಂದು ಪಿಡಿದಿರನು
ತನ್ನಂತೆ ಪರರ ಕಾಂಬವನು ಜಗವೆಲ್ಲ
ತಾನಾದ ಬಳಿಕ ಸರ್ವಜ್ಞ
ಕಾಯ-ಕಮಲವೆ ಸಜ್ಜೆ ಜೀವರತುನವೇ ಲಿಂಗ
ಭಾವ ಪುಷ್ಪದಿ ಶಿವಪೂಜೆ ಮಾಡುವನ
ದೇವನೆಂದೆಂಬೆ ಸರ್ವಜ್ಞ
ಒಬ್ಬನಲ್ಲದೇ ಜಗಕೆ ಇಬ್ಬರುಂಟೇ ಮತ್ತೆ
ಒಬ್ಬ ಸರ್ವಜ್ಞ ಕರ್ತನೀ ಜಗಕ್ಕೆಲ್ಲ
ಒಬ್ಬನೇ ದೈವ ಸರ್ವಜ್ಞ
ಕಲ್ಲುಗುಂಡಿಗ ಮೇಲೆ ಮಲ್ಲಿಗೆಯ ಅರಳಿಕ್ಕಿ
ನಿಲ್ಲದೆ ಹಣೆಯ ಬಡಿವರ್ಗೆ ಬುಗುಡಿಲ್ಲ
ದಿಲ್ಲ ಕಾಣಯ್ಯ ಸರ್ವಜ್ಞ
ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣಿಸುತ ಬರೆದ ಪಟ್ಟಿದೊಳಗೆ ಇರುವಾತ
ತನ್ನೊಳಗೆ ಇರನೆ ಸರ್ವಜ್ಞ
ಅಷ್ಠವಿಧದರ್ಚನೆಯ ನೆಷ್ಟು ಮಾಡಿದರೇನು
ನಿಷ್ಠೆ ನೆಲಗೊಳಗೆ ಭಜಿಸುವ ಪೂಜೆಯದು
ನಷ್ಟ ಕಾಣಯ್ಯ ಸರ್ವಜ್ಞ
ಬೊಮ್ಮ ತಾನೆಂಬುದು ಸುಮ್ಮನೆ ಬಹುದಲ್ಲ
ಹಮ್ಮಿನ ಪಥವನಳಿದರೆ ಪರಬೊಮ್ಮ
ಗಮ್ಮನೆ ಅಕ್ಕು ಸರ್ವಜ್ಞ
ಹರಗೆ ಕರ ಮುಗಿದೊಡೆ ವರ ನೀಡಲೊಲ್ಲನು
ನರ ರೂಪಧರಿಸಿ ಗುರುವಾಗಿ ಬೋಧಿಪಗೆ
ಸರಿಯೆ ಹರ ಕಾಗೆ ಸರ್ವಜ್ಞ
ಬೆಳ್ಳುಳ್ಳಿ ಉಸಿಲಂಗೆ ಪೊಳ್ಳಯಿಸಿ ಹರಿದಂತೆ
ಒಳ್ಳೆಯ ಗುರುವಿನುಪದೇಶದಿಂ ಭವದ
ಬಳ್ಳಿ ಹರಿದಿಹುದು ಸರ್ವಜ್ಞ
ಗುರುವಚನುಪದೇಶ ಗುರುವಚನ ಪರಭಕ್ತಿ
ಗುರುವಚನ ಪದವದುವೆ ಗುರುವಚನವೆ
ಪರಮಾರ್ಥವಯ್ಯ ಸರ್ವಜ್ಞ
ಷಟ್ಸ್ಥ ಮರ್ಮವನು ಸ್ಫುಟವಾಗಿ ತಾನರಿದು
ದಿಟವಾಗಿ ನಂಬಿ ನಡೆದಿಹರೆ ಇಹದಲ್ಲಿ
ಘಟಿಸುವುದು ಮುಕ್ತಿ ಸರ್ವಜ್ಞ
ಒಮ್ಮನದಲ್ಲಿ ಶಿವಪೂಜೆಯ ಗಮ್ಮನೆ ಮಾಡುವುದು
ಇರ್ಮನವಿಡಿದು ಕೆಡಬೇಡ ವಿಧಿವಶವು
ಸುಮ್ಮನೆ ಕೆಡಗು ಸರ್ವಜ್ಞ
ಲಿಂಗಕ್ಕೆ ತೋರದಲೆ ನುಂಗಿದಡೆ ಏನಹುದು
ಭಂಗಬಂಧನವು ಘನವಹುದು
ಆಲಿಂಗ ಹಿಂಗಿವುದು ಸರ್ವಜ್ಞ
ಅಣುವಾದಿಯೊಳಿರಲು ಹೂಣಿ ಲಿಂಗದಿಮನವ
ಕೇಣವಿಡಿದಿಹನು ವಿರತಿಯಲಿ ದೇಹದಿಹ
ಪ್ರಾಣಲಿಂಗಿಯು ತಾ ಸರ್ವಜ್ಞ
ನಾನು ನೀನುಗಳಳಿದು ತಾನು ಲಿಂಗದಿ ಉಳಿದು
ನಾನು ಭ್ರಮೆಗಳ ಹರಿಪಿಂಗಿ ನಿಂದವನ
ತಾನೈಕ್ಯ ನೋಡ ಸರ್ವಜ್ಞ
ನೆಲವನ್ನು ಮುಗಿಲನ್ನು ಹೊಲಿವರುಂಟೆದರವ
ಹೊಲಿವರು ಹೊಲಿವರೆನಬೇಕು| ಮೂರ್ಖನಲಿ
ಕಲಹ ಬೇಡವೆಂದ ಸರ್ವಜ್ಞ
ಗವುಡನೊಳು ಹಗೆತನವು ಕಿವುಡನೊಳು ಏಕಾಂತ
ಪ್ರವುಢನೊಳು ಮೂಢನುಪದೇಶ| ಹಸಿದೆದ್ದು
ತವುಡ ತಿಂದಂತೆ ಸರ್ವಜ್ಞ
ಸತ್ಯರ ನುಡಿ ತೀರ್ಥ ನಿತ್ಯರ ನಡೆ ತೀರ್ಥ
ಉತ್ತಮರ ಸಂಗವದು ತೀರ್ಥ ಹರಿವನೀ
ಹೆತ್ತಣದು ತೀರ್ಥ ಸರ್ವಜ್ಞ
ಇಂದು ನಾಳೆಗೆ ಎಂದು ತಂದು ಕೂಡಿಡಬೇಡ
ಬಂದುದನೆ ಕೊಂಡು ಸುಖಿಸುತ ಬೋನೆಯದು
ಬಂದಾಗ ನರಳು ಸರ್ವಜ್ಞ
ಕೋಲುವ ಧರ್ಮದ ನೊಯ್ದು ಒಲೆಯೊಳಗಿಕ್ಕೂ
ಕೊಲಲಾಗದೆಂಬ ಜೈನರಾ ಮತವೆನ್ನ
ತಲೆಯ ಮೇಲಿರಲಿ ಸರ್ವಜ್ಞ
ತನ್ನ ನೋಡಲು ಎಂದು ಕನ್ನಡಿಯು ಕರೆಯುವುದೇ
ತನ್ನಲ್ಲಿ ಭಾವ ಉದಿಸಿದ ಮಹಾತ್ಮನು
ಕನ್ನಡಿಯು ಜಗಕೆ ಸರ್ವಜ್ಞ
No comments:
Post a Comment